Monday, August 23, 2010

ಬಿಎಸ್‌ಎನ್ಎಲ್‌ನ ಹೊಸ ಯೋಜನೆ

ಬಿಎಸ್‌ಎನ್ಎಲ್ ಕಂಪೆನಿಯು ತನ್ನ ಪ್ರೀಪೇಡ್ ಗ್ರಾಹಕರಿಗೆ "ಬಿಎಸ್‌ಎನ್‌ಎಲ್ ಲೈವ್" ಹಾಗೂ "ಬಿಎಸ್‌ಎನ್‌ಎಲ್ ನೆಟ್" ಎಂಬ ಎರಡು ಹೊಸ ಯೋಜನೆಗಳನ್ನು ಪ್ರಕಟಿಸಿದೆ. ಇದರ ಮೂಲಕ ಮೊಬೈಲ್‌ನಲ್ಲಿ ಅಂತರ್ಜಾಲವನ್ನು ಜಾಲಾಡಬಹುದು, ಹಾಡು, ಗೇಮ್ಸ್, ವಾಲ್‌ ಪೇಪರ್‌‌ಗಳು, ವಿಡಿಯೋಗಳು ಮುಂತಾದವುಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಅಲ್ಲದೇ ಈ ಆಗಸ್ಟ್ 16ರಿಂದ 31ರವರೆಗೆ "ಬಿಎಸ್‌ಎನ್‌ಎಲ್ ಲೈವ್‌" ಸೇವೆಯನ್ನು ಉಚಿತವಾಗಿ ಉಪಯೋಗಿಸಬಹುದು! ನಾನು ಕಳೆದೆರಡು ದಿನಗಳಿಂದ ಟ್ವಿಟರ್‌ನ್ನು ಇದರ ಮೂಲಕವೇ ಬಳಸುತ್ತಿದ್ದೇನೆ. ನನಗಂತೂ ಈ ಸೇವೆ ತೃಪ್ತಿಕರ ಅನಿಸುತ್ತಿದೆ.

ಈ ಸೇವೆಯನ್ನು ಉಪಯೋಗಿಸಲು ನಿಮ್ಮ ಮೊಬೈಲ್‌ನಲ್ಲಿ ಜಿಪಿಆರ್‌ಎಸ್ ಸೌಲಭ್ಯವಿರಬೇಕು. ನಂತರ ಸೆಟ್ಟಿಂಗ್‌ಗಳನ್ನು ಪಡೆಯಲು ನಿಮ್ಮ ಮೊಬೈಲ್‌ನಿಂದ ಈ ರೀತಿ ಒಂದು ಮೆಸೇಜ್ ಸೃಷ್ಟಿಸಿ: ನಿಮ್ಮ ಮೊಬೈಲ್‌  ಹ್ಯಾಂಡ್‌ಸೆಟ್ ಕಂಪೆನಿಯ ಹೆಸರು[space] ಮಾಡೆಲ್ ನಂಬರ್‍ .ನಂತರ ಇದನ್ನು 58355ಗೆ ಕಳುಹಿಸಿ. ಉದಾಹರಣೆಗೆ- NOKIA N72 . ಸ್ವಲ್ಪ ಸಮಯದ ನಂತರ ನಿಮ್ಮ ಮೊಬೈಲ್‌ಗೆ ಎರಡು ಸೆಟ್ಟಿಂಗ್‌ಗಳು ಬರುತ್ತವೆ, ಒಂದು "ಬಿಎಸ್‌ಎನ್‌ಎಲ್ ಲೈವ್‌"ದು ಹಾಗೂ ಇನ್ನೊಂದು "ಬಿಎಸ್‌ಎನ್‌ಎಲ್ ನೆಟ್‌"ದು. ಬೇಕಾದರೆ ಎರಡನ್ನೂ ಇನ್ಸ್ಡಾಲ್‌ ಮಾಡಿಕೊಂಡು ಉಪಯೋಗಿಸಬಹುದು. ಆದರೆ ಬಿಎಸ್‌ಎನ್‌ಎಲ್ ಲೈವನ್ನಾದರೆ ಈ ತಿಂಗಳ ಕೊನೆಯವರೆಗೆ ಉಚಿತವಾಗಿ ಉಪಯೋಗಿಸಬಹುದು. "ಬಿಎಸ್‌ಎನ್‌ಎಲ್ ನೆಟ್‌"ಗಾದರೆ 10 KB ಉಪಯೋಗಿಸಿದರೆ ಐದು ಪೈಸೆ ಪಾವತಿಸಬೇಕಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಈ ತಾಣವನ್ನು ಸಂಪರ್ಕಿಸಿ.

-ಪ್ರಸನ್ನ.ಎಸ್.ಪಿ

Sunday, August 22, 2010

ತಾಯೇ ಬಂದು ನೆಲೆಸೌ ಇಂದಿರೆ ಎನ್ನೆಯ ಮಂದಿರದೊಳಗಾನಂದದಿ

ತಾಯೇ ಬಂದು ನೆಲೆಸೌ
ಇಂದಿರೆ ಎನ್ನೆಯ ಮಂದಿರದೊಳಗಾನಂದದಿ


ಹಲವು ಕಾಲದಿ ಕಾಣದೆ ನಿಮ್ಮನ್ನು
ಬಳಲುತನಿರ್ಪೆನು ದೇವಿಯೆ
ನಳಿನಾನೇತ್ರೆ ಕರುಣಾದಿಂದಲಿ
ಒಲಿದು ಬಂದಿರಿ ದೇವಿಯೆ


ಮುತ್ತು ಮಾಣಿಕ್ಯದ ಮಂಟಪದಲ್ಲಿ
ರತ್ನದ ಪೀಠವನಿರಿಸುವೆನು
ವಿಷ್ಣು ಸಹಿತಲೆ ಲಕ್ಶ್ಮೀ ನಿಮ್ಮನು
ಅರ್ಥಿಯಿಮ್ ಧ್ಯಾನಿಸಿ ಪೂಜಿಪೆ


ವರಮಣಿ ಖಚಿತದ ನೆರೆಗಿಂಡಿಯೊಳು
ಸುರನದಿ ಗಂಗೆಯ ತುಂಬುತಲಿ
ಸಿರಿವರನರಸಿಯ ಚರಣವ ತೊಳೆದು
ವರವಸ್ತ್ರಗಳಿಂದೊರೆಸುವೆನು


ಅಂಗಜ ಮಾತೆಗೆ ಅಭಿಷೇಕವನು
ಸಂಭ್ರಮದಿಂದಲಿ ಮಾಡುವೆನು
ಅಂದವಾದ ಪೀತಾಂಬರವನು
ಸುಂದರನಡುವಿನೊಳುಡಿಸುವೆನು


ಸಿರಿಮುಡಿಯೆಳೆಸುತ ಹೆರಳನು ಹಾಕುತ
ಪರಿಪರಿ ಕುಸುಮವ ಮುಡಿಸುವೆನು
ಸರಸೀಜಾಕ್ಷಿಗೆ ಸರ್ವಾಭರಣವ
ಪರಮಾದರದಿಂದ್‍ಹಾಕುವೆ


ಅರಸಿನ ಕುಂಕುಮ ಅಕ್ಷತೆ ಗಂಧ
ಪರಿಪರಿ ಕುಸುಮದ ಮಾಲೆಗಳ
ಸಿರಿವರನರಸಿಯ ಕೊರಳಿಗೆ ಹಾರವ
ಪರಮಾದರದಿಂದ ಹಾಕುವೆ


ಪರಿಪರಿ ಪುಷ್ಪದಿಂದೊಡಗೂಡುತ
ವರಧೂಪಾದಿ ದೀಪಗಳ
ಬಗೆಬಗೆ ಭಕ್ಷ ಪಾಯಸದಿಂದಲೆ
ಮಿಗಿಲಾರೊಗಣೆ ಮಾಡುವೆ


ಮಂಗಳವಾದ್ಯದಿಂದೊಡಗೂಡುತ
ಅಂಗನೆರೆಲ್ಲರು ಹರುಷದಲಿ
ಮಂಗಳಾರತಿ ಎತ್ತಿ ಚಂದದಿ
ವಂದಿಸಿ ನಾನು ಬೇಡುವೆ


ರಕ್ಷಿಸು ರಕ್ಷಿಸು ತಾಯೆ ನಮ್ಮನು
ಪ್ರದಕ್ಷಿಣೆಗಳ ನಾ ಮಾಡುವೆನು
ರಕ್ಷಿಸೆಮ್ಮನು ಲಕ್ಷ್ಮೀ ನಿಮ್ಮನು
ಅರ್ಥಿಯಿಮ್ ಧ್ಯಾನಿಸಿ ಬೇಡುವೆ


ಇದನ್ನು ಸಂಗ್ರಹಿಸಿ ಕೊಟ್ಟವರು ಆತ್ಮೀಯ keshavHSK ಅವರು, ಅವರಿಗೆ ನನ್ನ ಅನಂತ ಧನ್ಯವಾದಗಳು.

ಬಿಎಸ್‌ಎನ್‌ಎಲ್ ಲೈವ್

ಕಳೆದ ನಾಲ್ಕೈದು ದಿನಗಳಿಂದ ಬಿಎಸ್‌ಎನ್‌ಎಲ್ ಮೊಬೈಲ್ ಬಳಸುತ್ತಿರುವವರಿಗೆ ಈ ರೀತಿಯ ಮೆಸೇಜ್‌ಗಳು ಬರುತ್ತಿವೆ: ಕರೆ ಮಾಡಿ ಮುಗಿಸಿದ ನಂತರ ಈ ರೀತಿ-> Free streaming on BSNLlive, no usage/browsing charges 16-31 Aug. Vist http://bsnllive.net. ಹಾಗೂ ಟೆಕ್ಸ್ಟ್ ಮೆಸೇಜ್‌‌ನಲ್ಲಿ Watch Live TV, Movies & more on BSNLlive- http://bsnllive.net ಎಂದು ಬರುತ್ತಿದೆ.

ಆದರೆ bsnllive.netಗೆ ಭೇಟಿ ಕೊಟ್ಟರೆ ಅಲ್ಲಿ ಇದಕ್ಕೆ ಸಂಬಂಧಪಟ್ಟ ಯಾವುದೇ ಮಾಹಿತಿ ಇಲ್ಲ. ಹಾಗೂ bsnllive.netನಲ್ಲಿ ಬಿಎಸ್‌ಎನ್‌ಎಲ್‌ ಬಗ್ಗೆ ಏನೂ ವಿಷಯವೇ ಇಲ್ಲ. ಅದು ಯಾವುದೋ ಖಾಸಗಿ ತಾಣದ ರೀತಿ ಕಾಣಿಸುತ್ತದೆ.
ಗೂಗಲ್‌ನಲ್ಲಿ ಹುಡುಕಿದಾಗ ಸರಿಯಾದ ಅಡ್ರೆಸ್ ಸಿಕ್ಕಿತು: http://bsnllive.info/
ಬಿಎಸ್‌ಎನ್‌ಎಲ್‌ನವರಿಗೆ ನೆಟ್ಟಗೆ ಪ್ರಚಾರ ಮಾಡುವುದಕ್ಕೂ ಬರುವುದಿಲ್ಲ. ಜಾಹೀರಾತಿನಲ್ಲು ತಪ್ಪು ತಪ್ಪು ಮಾಹಿತಿಗಳು. ತಪ್ಪಾದ ಅಡ್ರೆಸ್ ಕೊಟ್ಟರೆ ಅವರ ಪ್ರಾಡಕ್ಟ್‌‌ಗಳು ಜನರಿಗೆ ತಲುಪುವುದಾದರೂ ಹೇಗೆ? ಇದನ್ನು ಅವರಿಗೆ ತಿಳಿಸಿ ಹೇಳುವವರು ಯಾರು?






(ಚಿತ್ರವನ್ನು ಹಿರಿದಾಗಿಸಲು ಅದರ ಮೇಲೆ ಕ್ಲಿಕ್ಕಿಸಿ)

Friday, August 20, 2010

ವರಮಹಾಲಕ್ಷ್ಮಿ ಹಬ್ಬಕ್ಕಾಗಿ ಅಷ್ಟಲಕ್ಷ್ಮೀ ಸ್ತೋತ್ರ.

ವರಮಹಾಲಕ್ಷ್ಮಿ ಹಬ್ಬದ ಪೂಜೆಗಾಗಿ ಅಷ್ಟಲಕ್ಷ್ಮೀ ಸ್ತೋತ್ರವನ್ನು ಹಾಕುತ್ತಿದ್ದೇನೆ. ಎಲ್ಲರಿಗೂ ವರಮಹಾಲಕ್ಷ್ಮಿ ಹಬ್ಬದ ಹಾರ್ಧಿಕ ಶುಭಾಶಯಗಳು.


 




























ನಾಯಿಗೆ "ಹಚಾ..." ಎಂದರೆ ಹತ್ತಿರ ಬರುತ್ತೋ ಇಲ್ಲಾ ಓಡಿ ಹೋಗುತ್ತೋ?

ನಾಯಿ ಸಾಕುವವರೆಲ್ಲ ಸಾಮಾನ್ಯವಾಗಿ ಅದಕ್ಕೆ ಟೈಗರ್‍ ಎಂದೋ ಟಾಮಿ ಎಂದೋ ಮುದ್ದಿನ ಹೆಸರಿಟ್ಟಿರುತ್ತಾರೆ. ಟಾಮಿ... ಟಾಮಿ... ಎಂದು ಕರೆದರೆ ಸಾಕು ಬಾಲ ಅಲ್ಲಾಡಿಸಿಕೊಂಡು ಯಜಮಾನನ ಬಳಿ ಬರುತ್ತವೆ. ಹಾಗೆಯೇ ನಾನು ಗಮನಿಸಿದ ಇನ್ನೊಂದು ವಿಷಯವೆಂದರೆ ನಾಯಿಗಳಿಗೆ "ಹಚಾ..." ಎಂದು ಗದರಿದರೆ ಓಡಿ ಹೋಗುತ್ತವೆ. ಇದನ್ನು ಎಲ್ಲರೂ ಒಪ್ಪುತ್ತೀರಾ ತಾನೆ?

ಈಗ ನನ್ನ ಪ್ರಶ್ನೆ ಏನೆಂದರೆ, ನಾಯಿಗೆ ಅದೇ "ಹಚಾ.." ಎಂದು ಹೆಸರು ಇಟ್ಟು, "ಹಚಾ... ಹಚಾ..." ಎಂದರೆ ಅದು ಬಾಲ ಅಲ್ಲಾಡಿಸಿಕೊಂಡು ಬರುತ್ತದೆಯೇ ಅಥವಾ ಹೆದರಿಕೊಂಡು ಓಡುತ್ತದೆಯೇ? :)

ಇದನ್ನು ಸುಮ್ಮನೆ ಹಾಸ್ಯದ ದೃಷ್ಟಿಯಿಂದ ಬರೆದದ್ದು. ಇದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ. :)

ಎಲ್ಲರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು. ಆ ದೇವರು ನಿಮಗೆಲ್ಲರಿಗೂ ಅಷ್ಟೈಶ್ವರ್ಯಾದಿಗಳನ್ನು ಕರುಣಿಸಲಿ ಎಂದು ಹಾರೈಸುವ,
 
-ಪ್ರಸನ್ನ.ಎಸ್.ಪಿ

Wednesday, August 18, 2010

ಕಪ್ಪೆಗೆ ಬಾಲ ಇರುತ್ತಾ?


ನಿನ್ನೆ ಸಂಜೆ ನಮ್ಮ ಮನೆಯ ಹಿತ್ತಲಲ್ಲಿ ಒಂದು ಕಪ್ಪೆಯನ್ನು ನೋಡಿದೆ. ಸುಮಾರಾಗಿ ದೊಡ್ಡದಾಗಿಯೇ ಇತ್ತು. ಆದರೆ ನನಗೆ ಆಶ್ಚರ್ಯ ಆಗಿದ್ದು ಎಂದರೆ ಅದಕ್ಕೊಂದು ಉದ್ದದ ಬಾಲ ಇತ್ತು. ಎಲ್ಲರನ್ನೂ ಕರೆಯೋಣ ಎಂದು ಮನೆಗೆ ಹೋಗಿ, ಮತ್ತೆ ಬರುವಷ್ಟರಲ್ಲಾಗಲೇ ಅದು ಮಾಯವಾಗಿತ್ತು! ಬಹುಷಃ ಗೊದಮಟ್ಟೆಯಿಂದ ಕಪ್ಪೆಗೆ ರೂಪಾಂತರ ಹೊಂದುವಾಗ ಬಾಲ ಉದುರಿರಲಿಲ್ಲ ಅನ್ಸುತ್ತೆ! :-)

(ಚಿತ್ರ ವಿಕಿಪೀಡಿಯಾದಿಂದ)

-ಪ್ರಸನ್ನ.ಎಸ್.ಪಿ

Tuesday, August 17, 2010

ನನ್ನ ಬ್ಲಾಗಿಗೆ ಹೊಸ ಹೆಸರು

ಸ್ನೇಹಿತರೇ, ನನ್ನ ಬ್ಲಾಗಿಗೆ "ಅಂತಃಸ್ಫುರಣ" ಎಂಬ ಹೊಸ ಹೆಸರು ಇಟ್ಟಿದ್ದೇನೆ. ಮರುನಾಮಕರಣ ಮಾಡಲು ಸಹಕರಿಸಿದ ಸಂಪದಿಗರಾದ, ವಿಜಯ್, ಅಬ್ದುಲ್, ಮಂಜಣ್ಣ, ಹರೀಶ್, ವಸಂತ್ ಎಲ್ಲರಿಗೂ ಧನ್ಯವಾದಗಳು.

Pakistanis are.......

These are the Google's best searching suggestions!  Thanks @pavanaja for finding this.



Sunday, August 15, 2010

ಸ್ವಾತಂತ್ರ್ಯೋತ್ಸವದ ಶುಭಾಶಯಗಳು.


ಮತ್ತೆ ಬಂದಿದೆ ಸ್ವಾತಂತ್ರ್ಯೋತ್ಸವ, ಈ ಸಂದರ್ಭದಲ್ಲಿ ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಎಲ್ಲಾ ಮಹನೀಯರಿಗೂ ಒಂದು ನಮನ. ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಹಾರ್ಧಿಕ ಶುಭಾಶಯಗಳು. 


~ಜೈ ಹಿಂದ್- ವಂದೇ ಮಾತರಂ~
-ಪ್ರಸನ್ನ.ಎಸ್.ಪಿ

Friday, August 13, 2010

ಕೋಮಲ್ ಎಂಬ ಹಾಸ್ಯ ಬರಹಗಾರ

ಹಾಸ್ಯ ಲೇಖನಕ್ಕೆ ಮತ್ತೊಂದು ಹೆಸರು


ಜೀವನದಲ್ಲಿ ದುಃಖಗಳು ಸಾಮಾನ್ಯ. ಅದರ ಚಿಂತೆಯಲ್ಲೇ ನಮ್ಮ ದಿನಗಳನ್ನು ಕಳೆದರೆ ದೇಹ ರೋಗಗಳ ತಾಣವಾಗಿ ಬಿಡುತ್ತದೆ. ಆದಷ್ಟು ನಾವು ನಗುತ್ತಾ, ಮತ್ತೊಬ್ಬರನ್ನೂ ನಗಿಸುತ್ತಾ ಬಾಳಿದರೆ ಅದರ ಮಜಾನೇ ಬೇರೆ. ಅದನ್ನೇ ನಾನು ಮಾಡಲಿಚ್ಚಿಸಿರುವುದು. ಮನದ ನೋವುಗಳನ್ನೆಲ್ಲಾ ಮರೆತು ಯಾವಾಗಲೂ ಹಸನ್ಮಖಿಯಾಗಿರಿ. ಅಂದ ಹಾಗೆ ನೀವು ಕೂಡ ನಿಮ್ಮ ಹಾಸ್ಯ ಲೇಖನಗಳನ್ನು, ಕವನಗಳನ್ನು, ಘಟನಾವಳಿಗಳನ್ನು ಬರೆಯಬಹುದು. ಬರುತ್ತೀರಾ ತಾನೆ. ನಮ್ಮನ್ನೂ ನಗಿಸಿ. ನೂರು ವರ್ಷ ಬಾಳಿ. ಇದೇ ನನ್ನ ಹಾರೈಕೆ.


ಮೇಲಿನ ಮಾತುಗಳು ಎಷ್ಟು ಸತ್ಯ ಅಲ್ಲವೇ? ನಾವು ನಗುನಗುತ್ತಾ ಇದ್ದರೆ ಜೀವನ ಸುಂದವಾಗಿರುತ್ತದೆ. ಆದರೆ ನಮ್ಮ ಇಂದಿನ ಜಂಜಾಟದ ಬದುಕಿನಲ್ಲಿ ನಗಲೂ ನಮಗೆ ಪುರುಸೊತ್ತಿರುವುದಿಲ್ಲ. ಆದರೆ ನಾವು ನಮ್ಮ ಒತ್ತಡಗಳನ್ನೆಲ್ಲಾ ಬದಿಗೊತ್ತಿ ನೋಡಲೇಬೇಕಾದ ತಾಣವೊಂದಿದೆ, ಅದೇ ನಮ್ಮ ನಿಮ್ಮೆಲ್ಲರ "ಕೋಮಲ್" ಅವರ ಹಾಸ್ಯ ಬರಹಗಳ ಬ್ಲಾಗ್. ಅವರ ತಾಣ ಹೊಕ್ಕೊಡನೆ ನಮಗೆ ಕಾಣುವುದು ಮೇಲಿನ ಸಾಲುಗಳು.ಅವರ ತಾಣದಲ್ಲಿ ಮುಂದೆ ಮುಂದೆ ಓದುತ್ತಾ ಹೋದೊಡನೆ ನಮಗೆ ನಕ್ಕೂ ನಕ್ಕೂ ಸಾಕಾಗುತ್ತದೆ. ಹತ್ತಾರು ಹಾಸ್ಯ ಲೇಖನಗಳ ಮೂಲಕ ನಮ್ಮನ್ನು ನಗೆಯಲ್ಲಿ ತೇಲಿಸುತ್ತಾರೆ. ಅವರ ಬರಹಗಳಲ್ಲಿ ಬರುವ ಗಬ್ಬುನಾಥ ಗೌಡಪ್ಪ, ಸುಬ್ಬ, ರಂಗ, ಕಟ್ಟಿಗೆ ಒಡೆಯುವ ಕಿಸ್ನ, ನಿಂಗಿ ಮುಂತಾದವರು ನಿಜವಾಗಿಯೂ ಇದ್ದಾರೇನೋ ಎಂದು ಭಾಸವಾಗುತ್ತದೆ. ಪ್ರಚಲಿತ ಘಟನೆಗಳಿಗೆ ಹಾಸ್ಯ ರೂಪ ಕೊಡುವುದು ಇವರ ವಿಶೇಷ. ಇವರ ಬರಹಗಳಲ್ಲಿ ಫುಟ್‌‌ಬಾಲ್ ವಿಶ್ವಕಪ್, ಕಾಂಗ್ರೆಸ್ ಪಾದಯಾತ್ರೆ, ಬಳ್ಳಾರಿ ಗಣಿಗಾರಿಕೆ, ಸ್ನೇಹಿತರ ದಿನ, ಮೊಬೈಲ್‌‌ ಫೋನ್ ಅವಾಂತರ ಹೀಗೆ ಎಲ್ಲವೂ ಬರುತ್ತದೆ. ಎಲ್ಲ ವಿಷಯಗಳನ್ನೂ ಹಾಸ್ಯಕ್ಕೆ ಒಗ್ಗಿಸಿಕೊಳ್ಳುವ ಕಲೆ ಇವರಿಗೆ ಕರಗತವಾಗಿದೆ. ಜೊತೆಗೆ ಪ್ರತೀ ಬರಹಕ್ಕೂ ಒಂದೊಂದು ಚೆಂದದ ರೇಖಾಚಿತ್ರವನ್ನು ಹಾಕುತ್ತಾರೆ. ಅವರ ಹಾಸ್ಯ ಬರಹಗಳನ್ನು ಓದುತ್ತಾ ಹೋದರೆ ಯಾವ ಪರಿಸ್ಥಿತಿಯಲ್ಲಿದ್ದೇವೆ ಎಂಬುದನ್ನೂ ಲೆಕ್ಕಿಸದೇ ನಗತೊಡಗುತ್ತೇವೆ. ಅಂತಹ ತಾಕತ್ತು ಕೋಮಲ್‌‌ರ ಬರಹಗಳಲ್ಲಿದೆ.

ಇನ್ನೇಕೆ ತಡ, ನೀವೂ ಕೋಮಲ್‌‌ರ ಬ್ಲಾಗ್‌ಗೆ ಭೇಟಿ ನೀಡಿ. ಅವರ ಬರಹಗಳನ್ನು ಓದಿ, ಮನಸಾರೆ ನಕ್ಕು ಹಗುರಾಗಿ. ಹಾಗೆಯೇ ಈ ತಾಣದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ, ಅವರನ್ನೂ ನಗಿಸಿ.

ಕೋಮಲ್‌‌ ಅವರ ಬ್ಲಾಗ್ ವಿಳಾಸ : http://komal1231.blogspot.com


ಸಂಪದದಲ್ಲಿ ಕೋಮಲ್‌‌ರ ಬರಹಗಳು: http://sampada.net/user/komal-kumar1231

(ಚಿತ್ರವನ್ನು ಹಿರಿದಾಗಿಸಲು ಅದರ ಮೇಲೆ ಕ್ಲಿಕ್ಕಿಸಿ)

Thursday, August 12, 2010

CFL ಉಡುಗೊರೆ ಕೊಟ್ಟರೆ ಹೇಗೆ?


ನಾವು ಸಾಮಾನ್ಯವಾಗಿ ಮದುವೆ, ಮುಂಜಿ, ಹುಟ್ಟುಹಬ್ಬ ಮುಂತಾದ ಕಾರ್ಯಕ್ರಮಗಳಿಗೆ ಹೋದಾಗ ವಧೂ-ವರರಿಗೆ, ವಟುಗಳಿಗೆ "ಗಡಿಯಾರ, ದೇವರ ಫೋಟೋ/ವಿಗ್ರಹ, ಹೂ ಗುಚ್ಚ, ವರ್ಣ ಚಿತ್ರ" ಮುಂತಾದ ಉಡುಗೊರೆಗಳನ್ನು ಕೊಡುತ್ತೇವೆ. ಎಷ್ಟೋ ಸಲ ನಾವು ಕೊಡುವ ಉಡುಗೊರೆಗಳು ಅವರಿಗೆ ಯಾವುದೇ ರೀತಿಯ ಉಪಯೋಗಕ್ಕೂ ಬರುವುದಿಲ್ಲ. ಹಾಗಾಗಿ ಕೆಲಸಕ್ಕೆ ಬಾರದ ಉಡುಗೊರೆಗಳನ್ನು ಕೊಡುವ ಬದಲಿಗೆ CFL (Compact fluorescent lamp) ಗಳನ್ನು ಕೊಟ್ಟರೆ ಹೇಗೆ? Incandescent light bulbಗಳ ಬದಲಿಗೆ CFL ಗಳನ್ನು ಬಳಸುವುದರಿಂದ ಆಗುವ ಉಪಯೋಗಗಳು ಎಲ್ಲರಿಗೂ ಗೊತ್ತೇ ಇದೆ. ಹಾಗಾಗಿ CFLಗಳ ಬಳಕೆಯನ್ನು ಉತ್ತೇಜಿಸಲು ನಾವು ಈ ರೀತಿಯ ಕ್ರಮಗಳನ್ನು ಅನುಸರಿಸಬಹುದಲ್ಲವೇ?




















(ಚಿತ್ರ ವಿಕಿಪೀಡಿಯಾದಿಂದ)

ಎಂಜಿನಿಯರಿಂಗ್‌ನಲ್ಲಿ ಅಂಕ ಗಳಿಸುವುದು ಹೀಗೆ!

ಕೆಳಗೆ ಇರುವುದು ಎಂಜಿನಿಯರಿಂಗ್ ಕಾಲೇಜು ಪರೀಕ್ಷೆಯಲ್ಲಿ ಯಾರೋ ಒಬ್ಬಾತ ಬರೆದ ಉತ್ತರದ ನಕಲು ಪ್ರತಿ. ಉತ್ತರವನ್ನು ಕೊನೆಯವರೆಗೂ ಸರಿಯಾಗಿ ನೋಡಿ. ಎಂಜಿನಿಯರಿಂಗ್‌ನಲ್ಲಿ ಅಂಕ ಪಡೆಯಬೇಕಾದರೆ ಶಾರುಖ್ ಖಾನ್‌ನ ಸಿನೆಮಾ ಕಥೆ ಬರೆಯಬೇಕು, ಆಗ ನಾಲ್ಕು ಅಂಕ ಸಿಗುತ್ತದೆ! ಚಿತ್ರ ಪ್ರಸನ್ನ ಕಾಕುಂಜೆ ಅವರ ಫೇಸ್‌‌ಬುಕ್ ಪ್ರೊಫೈಲ್‌‌ನಿಂದ.



Wednesday, August 11, 2010

ಶಾಲೆಗಳಿಗೆ ಕಂಪ್ಯೂಟರ್‍ ಕೊಡುಗೆ ನೀಡಿ.


ಈಗ ಕಂಪ್ಯೂಟರ್‍ ಎಲ್ಲಾ ಕ್ಷೇತ್ರಗಳಲ್ಲಿಯೂ ವ್ಯಾಪಿಸಿದೆ. ಆದರೂ ಗ್ರಾಮೀಣ ಪ್ರದೇಶದಲ್ಲಿ ಕಂಪ್ಯೂಟರ್‌ ಅಷ್ಟೊಂದು ಬಳಕೆಯಲ್ಲಿಲ್ಲ. ಅದಕ್ಕೆ ಬಹುಷಃ ಗ್ರಾಮೀಣ ಪ್ರದೇಶಿಗರಿಗೆ ಕಂಪ್ಯೂಟರ್‍ ಜ್ಞಾನ ಕಡಿಮೆಯಿರುವುದೇ ಕಾರಣವಿರಬಹುದು. ಗ್ರಾಮೀಣ ಪ್ರದೇಶದಲ್ಲಿ ಕಂಪ್ಯೂಟರ್‍ ಶಿಕ್ಷಣ ನೀಡುವ ಸಂಸ್ಥೆಗಳೂ ಸಾಕಷ್ಟಿಲ್ಲ. ಶಾಲೆಗಳಲ್ಲಿ ಮಕ್ಕಳಿಗೆ ಕಂಪ್ಯೂಟರ್‍ ಶಿಕ್ಷಣ ನೀಡಲು ಕ್ರಮ ಕೈಗೊಂಡಿದ್ದರೂ, ಕೆಲವು ಶಾಲೆಗಳಲ್ಲಿ ಕಂಪ್ಯೂಟರ್‍ ಇದ್ದರೆ ಕಲಿಸಲು ಶಿಕ್ಷಕರಿರುವುದಿಲ್ಲ, ಶಿಕ್ಷಕರಿದ್ದರೆ ಕಲಿಸಲು ಸಾಕಷ್ಟು ಕಂಪ್ಯೂಟರ್‌‌ಗಳೇ ಇರುವುದಿಲ್ಲ! ನಾನು ಹೈಸ್ಕೂಲಿನಲ್ಲಿ ಕಲಿಯುತ್ತಿದ್ದಾಗ ಇಡೀ ಶಾಲೆಗೆ ಒಂದೇ ಒಂದು ಕಂಪ್ಯೂಟರ್‍ ಇತ್ತು. ಅದರಲ್ಲೇ ಎಲ್ಲರೂ ಕಲಿಯಬೇಕಿತ್ತು. ಎಷ್ಟೋ ಮಕ್ಕಳಿಗೆ ಕಲಿಯುವ ಆಸಕ್ತಿ ಇದ್ದರೂ ಕಲಿಯಲು ಅವಕಾಶವೇ ಸಿಗುತ್ತಿರಲಿಲ್ಲ.

ನಾನು ಇಷ್ಟೆಲ್ಲಾ ಏಕೆ ಹೇಳುತ್ತಿದ್ದೇನೆಂದರೆ, ನೀವು ನಿಮ್ಮ ಕಂಪ್ಯೂಟರ್‌ನ್ನು ಬದಲಾಯಿಸುತ್ತಿದ್ದರೆ ಹಳೆಯ ಸುಸ್ಥಿತಿಯಲ್ಲಿರುವ ಕಂಪ್ಯೂಟರ್‍ನ್ನು, ಸಾಧ್ಯವಾದರೆ ಯಾವುದಾದರೂ ಸೂಕ್ತ ಶಿಕ್ಷಕರಿರುವ ಗ್ರಾಮೀಣ ಸರ್ಕಾರಿ ಶಾಲೆಗೆ ಕೊಡುಗೆಯಾಗಿ ನೀಡಿ. ಇದರಿಂದ ಕಂಪ್ಯೂಟರ್‍ ಕಲಿಯಬೇಕೆನ್ನುವ ಮಕ್ಕಳಿಗೆ ಸಹಾಯವಾಗುತ್ತದೆ. ಇಂದಿನ ದಿನಗಳಲ್ಲಿ ಮಕ್ಕಳಿಗೆ ಕಂಪ್ಯೂಟರ್‍ ಶಿಕ್ಷಣದ ಅವಶ್ಯಕತೆ ಸಾಕಷ್ಟಿದೆ. ನಮ್ಮ ಒಂದು ಸಣ್ಣ ಕೊಡುಗೆಯಿಂದ ಎಷ್ಟೋ ಮಕ್ಕಳಿಗೆ ಸಹಾಯವಾಗುವುದಾದರೆ ಅದಕ್ಕಿಂತ ಸಂತೋಷ ಬೇರೆ ಇಲ್ಲ ಅಲ್ಲವೇ?

-ಪ್ರಸನ್ನ.ಎಸ್.ಪಿ

Tuesday, August 10, 2010

ಉಬುಂಟು dual boot

ವಿಂಡೋಸ್ ಹಾಗೂ ಉಬುಂಟು dual bootನಲ್ಲಿ, ಮೊದಲು ವಿಂಡೋಸ್ ಇನ್ಸ್‌ಟಾಲ್ ಮಾಡಿ ನಂತರ ಉಬುಂಟು ಇನ್ಸ್‌ಟಾಲ್ ಮಾಡಿದ್ದರೆ, ಉಬುಂಟು default ಆಪರೇಟಿಂಗ್ ಸಿಸ್ಟಮ್ ಆಗಿರುತ್ತದೆ. ಹಾಗಾಗಿ ಪ್ರತಿ ಸಲ ಕಂಪ್ಯೂಟರ್‍ ಆನ್ ಮಾಡಿದಾಗ default OS ಆದ ಉಬುಂಟು ಬೂಟ್ ಆಗುತ್ತದೆ. ನಿಮಗೆ ವಿಂಡೋಸ್ ಬೂಟ್ ಆಗಬೇಕೆಂದರೆ, ಉಬುಂಟು ಬೂಟ್ ಆಗುವ ಮೊದಲೇ ವಿಂಡೋಸ್‌‌ನ್ನು ಆಯ್ಕೆ ಮಾಡಬೇಕಾಗುತ್ತದೆ. ಪ್ರತೀ ಸಲ ವಿಂಡೋಸ್‌‌‌ನ್ನು ಸೆಲೆಕ್ಟ್ ಮಾಡುವ ಬದಲು ವಿಂಡೋಸ್‌‌ನ್ನು default OS ಆಗಿ ಸೆಲೆಕ್ಟ್ ಮಾಡಲು menu.lst ಫೈಲ್‌‌ನ್ನು ಎಡಿಟ್ ಮಾಡಬಹುದು. ಆದರೆ ಅದರಲ್ಲಿ ಸ್ವಲ್ಪ ಎಡವಟ್ಟಾದರೂ ಆಮೇಲೆ ಯಾವ ಆಪರೇಟಿಂಗ್ ಸಿಸ್ಟಮ್ ಕೂಡಾ ಬೂಟ್ ಆಗುವುದಿಲ್ಲ. ಹಾಗಾಗಿ ವಿಂಡೋಸ್‌‌ನ್ನು default OS ಆಗಿ ಆರಿಸಲು ಒಂದು ಸರಳ ಹಾಗೂ ಸುರಕ್ಷಿತ ವಿಧಾನವಿದೆ.

ನಿಮ್ಮ ಉಬುಂಟು ಸಿಸ್ಟಮ್‌ನ್ನು ಇಂಟರ್‌‌ನೆಟ್‌‌ಗೆ ಕನೆಕ್ಟ್ ಮಾಡಿ. ನಂತರ ಟರ್ಮಿನಲ್ ಓಪನ್ ಮಾಡಿ ಈ ಕೆಳಗಿನ ಕಮ್ಯಾಂಡನ್ನು ರನ್ ಮಾಡಿ :

$ sudo apt-get install startupmanager

startup manager ಇನ್ಸ್‌ಟಾಲ್ ಆದ ನಂತರ, ಆ ತಂತ್ರಾಂಶವನ್ನು ಉಪಯೋಗಿಸಿ ವಿಂಡೋಸ್‌ನ್ನು default OS ಆಗಿ ಆರಿಸಬಹುದು.

(ಶೀಘ್ರದಲ್ಲೇ ಇದಕ್ಕೆ ಸಂಬಂಧಿಸಿದ ಸ್ಕ್ರೀನ್‌‌ಶಾಟ್‌ಗಳನ್ನು ಹಾಕುವ ಪ್ರಯತ್ನ ಮಾಡುವೆ)

Monday, August 9, 2010

ಸಮೊಸ ಕಳುಹಿಸಿ

ಇದೇನು ಸಮೋಸವನ್ನು ತಪ್ಪಾಗಿ ಬರೆದಿದ್ದಾನಲ್ಲ ಎಂದುಕೊಳ್ಳಬೇಡಿ. ನಾನು ಹೇಳುತ್ತಿರುವುದು ತಿನ್ನುವ ಸಮೋಸವಲ್ಲ, ಕಳುಹಿಸುವ ಸಮೊಸ. ಏನು, ಅರ್ಥವಾಗಲಿಲ್ಲವೇ? ಸಮೊಸ ಎಂದರೆ "ಸರಳ ಮೊಬೈಲ್ ಸಂದೇಶ" ಅರ್ಥಾತ್ SMS!. ಹೌದು! ಇದು ಮೊಬೈಲಿಂದ ಮೊಬೈಲಿಗೆ ಕಳುಹಿಸುವ ಸಮೊಸ. ನಾವೆಲ್ಲರೂ ಕನ್ನಡಿಗರಲ್ಲವೇ, ಹಾಗಾಗಿ  ಇಂಗ್ಲೀಷಲ್ಲಿ ಎಸ್ಸೆಮ್ಮೆಸ್ಸ್ ಎಂದು ಹೇಳುವ ಬದಲು ಅಚ್ಚ ಕನ್ನಡದಲ್ಲಿ ’ಸಮೊಸ’ ಎನ್ನೋಣ. ನಾನಂತೂ ಎಸ್ಸೆಮ್ಮೆಸ್ಸ್ ಬದಲು ಸಮೊಸ ಕಳುಹಿಸುತ್ತಿದ್ದೇನೆ. ನೀವೂ ಇನ್ನು ಮುಂದೆ ಸಮೊಸ ಕಳುಹಿಸಿ.

ಅಂದಹಾಗೆ ’ಸಮೊಸ’ದ  ಐಡಿಯ ದೇವರಾಣೆಗೂ ನನ್ನದಲ್ಲ. ನಾನೂ ’ಸಮೊಸ’ದ ಬಗ್ಗೆ ಓದಿದ್ದು ಆಸುಹೆಗ್ಡೆ ಅವರ ಬ್ಲಾಗ್‌‌ನಲ್ಲಿ. ಸಮೊಸದ ಬಗ್ಗೆ ತಿಳಿಸಿದ ಅವರಿಗೆ ನನ್ನ ಧನ್ಯವಾದಗಳು. 

"ಕನ್ನಡ ಉಳಿಸಿ, ಕನ್ನಡ ಬೆಳೆಸಿ"  ~~ಜೈ ಕರ್ನಾಟಕ ಮಾತೆ~~

-ಪ್ರಸನ್ನ.ಎಸ್.ಪಿ

Thursday, August 5, 2010

ವಿಂಡೋಸ್ ಬೂಟ್‌‌ನಲ್ಲಿ ತೊಂದರೆ


ನಿನ್ನೆ ನನ್ನ ಕಂಪ್ಯೂಟರ್‍ ಚಾಲನೆ ಮಾಡಿದರೆ ವಿಂಡೋಸ್(ಎಕ್ಸ್‌‌ಪಿ) ಬೂಟ್ ಆಗುತ್ತಿರಲಿಲ್ಲ, ಬದಲಿಗೆ

"Windows could not start because of an error in the software.

Please report this problem as,
load needed DLLs for kernel.

Please contact your support person to report this problem"

ಎಂಬ ಸಂದೇಶ ಬರುತ್ತಿತ್ತು. fixmbr, fixboot, ಮುಂತಾದ ಕಮ್ಯಾಂಡ್‌‌ಗಳನ್ನು ಉಪಯೋಗಿಸಿ ವಿಂಡೋಸ್ ಸರಿಮಾಡಲು ಹೋದರೆ ಏನು ಪ್ರಯೋಜನವಾಗಲಿಲ್ಲ. ವಿಂಡೋಸ್ repair ಕೂಡ ಆಗುತ್ತಿರಲಿಲ್ಲ. ಅದನ್ನು ಸರಿಪಡಿಸುವಷ್ಟು ತಾಳ್ಮೆಯೂ ಇರಲಿಲ್ಲ. ಕೊನೆಗೆ ಲಿನಕ್ಸ್ ಬಳಸಿ C ಡ್ರೈವ್‌‌ನ ಬ್ಯಾಕಪ್ ತೆಗೆದುಕೊಂಡು, ವಿಂಡೋಸ್‌ನ್ನು ಮರುಸ್ಥಾಪಿಸಿದೆ.

ಈ ರೀತಿ ಏಕಾಗಿರಬಹುದು ಎಂದು ನಿಮಗೇನಾದರೂ ಗೊತ್ತಾದರೆ ತಿಳಿಸಿ. ಹಾಗೆಯೇ ಮುಂದೆ ಈ ರೀತಿ ಅದರೆ ಹೇಗೆ ಸರಿಪಡಿಸಬಹುದು ಎಂದೂ ತಿಳಿಸಿ.

-ಪ್ರಸನ್ನ.ಎಸ್.ಪಿ

Wednesday, August 4, 2010

ಭಾರತೀಯರಿಗಾಗಿ ಭಾರತೀಯ ಬ್ರೌಸರ್


"ಭಾರತೀಯರಿಗಾಗಿ ಭಾರತೀಯ ಬ್ರೌಸರ್‍" ಎಂಬ ಸ್ಲೋಗನ್‌‌ನೊಂದಿಗೆ ಬಂದಿದೆ ಎಪಿಕ್ ಬ್ರೌಸರ್‍. ಮೊಝಿಲ್ಲ ಫೈರ್‌‌ಫಾಕ್ಸ್‌‌ನ ಪ್ಲಾಟ್‌‌ಫಾರ್ಮ್‌‌ನಲ್ಲಿಯೇ ನಿರ್ಮಿತವಾಗಿದ್ದರೂ ಫೈರ್‌‌‌ಫಾಕ್ಸ್‌ಗಿಂತ ಸಾಕಷ್ಟು ಭಿನ್ನವಾಗಿದೆ. Anti-virus ಹೊಂದಿರುವುದು ಇದರ ವಿಶೇಷ. 1500ಕ್ಕೂ ಹೆಚ್ಚು ಥೀಮ್ ಹಾಗೂ ವಾಲ್‌ಪೇಪರ್‌‌ಗಳನ್ನು ಆರಿಸಿಕೊಳ್ಳುವ ಅವಕಾಶವಿದೆ. ಇದರಲ್ಲಿ ಸಾಕಷ್ಟು ಉಪಯುಕ್ತ ಸೌಲಭ್ಯಗಳಿವೆ. ಸೈಡ್‌‌ಬಾರ್‍ ಅಪ್ಲಿಕೇಷನ್‌‌ಗಳನ್ನು ಹೊಂದಿದ ಮೊದಲ ಬ್ರೌಸರ್‍ ಇದು. ಯಾವುದೇ ತಂತ್ರಾಂಶದ ಸಹಾಯವಿಲ್ಲದೆ ಈ ಬ್ರೌಸರ್‌‌ನ ಮೂಲಕ ಎಲ್ಲಾ ಭಾರತೀಯ ಭಾಷೆಗಳಲ್ಲಿ ಬರೆಯಬಹುದು. ನಿಮ್ಮ ಕಂಪ್ಯೂಟರ್‌‌ನ್ನು ಈ ಬ್ರೌಸರ್‌‌ ಮೂಲಕವೇ ಜಾಲಾಡಬಹುದು. to do list, alerts, stopwatch ಮುಂತಾದ ಸಲಕರಣೆಗಳಿವೆ. ಟ್ವಿಟರ್‍, ಫೇಸ್‌‌ಬುಕ್, ಆರ್ಕುಟ್, ಮುಂತಾದ 1500ಕ್ಕು ಹೆಚ್ಚು ಅಪ್ಲಿಕೇಷನ್‌ಗಳಿವೆ.
(ಚಿತ್ರವನ್ನು ಹಿರಿದಾಗಿಸಲು ಅದರ ಮೇಲೆ ಕ್ಲಿಕ್ಕಿಸಿ)

ಎಪಿಕ್ ಬ್ರೌಸರ್‌‌‌‌ನ್ನು ಇಲ್ಲಿಂದ ಇಳಿಸಿಕೊಳ್ಳಬಹುದು(ಫೈಲ್ ಸುಮಾರು 10.6 ಎಂಬಿ ಇರುತ್ತದೆ). ಹೆಚ್ಚಿನ ಮಾಹಿತಿ ಇಲ್ಲಿ ದೊರೆಯುತ್ತದೆ.


-ಪ್ರಸನ್ನ.ಎಸ್.ಪಿ

ನಕಲಿ ಸಿಡಿ/ಡಿವಿಡಿಗಳ ಹಾವಳಿ


ನೀವು ಸಿಟಿ ಮಾರ್ಕೆಟ್‌ಗಳಲ್ಲಿ, ಬಸ್‌‌ಸ್ಟ್ಯಾಂಡ್‌‌ಗಳ ಬಳಿ, ಜನನಿಬಿಡ ರಸ್ತೆಗಳ ಪಕ್ಕ ತಳ್ಳುಗಾಡಿಗಳಲ್ಲಿ ಚಲನಚಿತ್ರಗಳ ಸಿಡಿ ಹಾಗೂ ಡಿವಿಡಿಗಳನ್ನು ಇಟ್ಟು ಮಾರುತ್ತಿರುವವರನ್ನು ನೋಡಿರಬಹುದು. ಹೋಗಿ ವಿಚಾರಿಸಿದರೆ ಒಂದು ಡಿವಿಡಿಗೆ ಸುಮಾರು ಮೂವತ್ತರಿಂದ ಮೂವತ್ತೈದು ರೂಪಾಯಿ ಹೇಳುತ್ತಾರೆ. ಸ್ವಲ್ಪ ಚೌಕಾಶಿ ಮಾಡಿದರೆ ಇಪ್ಪತೈದು ರೂಪಾಯಿಗೂ ಕೊಡಬಹುದು. ಇಷ್ಟು ಕಡಿಮೆ ದುಡ್ಡಿಗೆ ಡಿವಿಡಿ ಕೊಡುತ್ತಾರಲ್ಲ ಎಂದು ಆಶ್ಚರ್ಯವಾಗುತ್ತದೆಯಲ್ಲವೇ? ಅದರಲ್ಲೂ ಒಂದೇ ಡಿವಿಡಿಯಲ್ಲಿ ಹೊಚ್ಚ ಹೊಸ ನಾಲ್ಕೈದು ಚಲನಚಿತ್ರಗಳು ಇರುತ್ತದೆ. ಆದರೆ ನಿಜವಾದ ಸಂಗತಿ ಏನೆಂದರೆ ಅವು ಯಾವುವೂ ಅಸಲಿ ಡಿವಿಡಿಗಳಲ್ಲ! ಒಂದೋ ಅಸಲಿ ಸಿಡಿ/ಡಿವಿಡಿಯನ್ನು ಕಾಪಿ ಮಾಡಿರುತ್ತಾರೆ ಅಥವಾ ಆ ಚಲನಚಿತ್ರಗಳು ಥಿಯೇಟರ್‍ ಪ್ರಿಂಟ್ ಆಗಿರುತ್ತದೆ. ಹೊರಗಿನ ಕವರ್‍ ಮಾತ್ರ ಥೇಟ್ ಅಸಲಿಯಂತೆಯೇ ಇರುತ್ತದೆ. ಆದರೆ ಒಳಗಿನ ಡಿವಿಡಿ ಮಾತ್ರ ನಕಲಿ! ಅಲ್ಲದೇ ಈ ಡಿವಿಡಿಗಳ ದೃಶ್ಯದ ಗುಣಮಟ್ಟವೂ ಅಷ್ಟೊಂದು ಚೆನ್ನಾಗಿರುವುದಿಲ್ಲ. ಈ ಡಿವಿಡಿಗಳನ್ನು ಕೊಳ್ಳುವವರು ನೀಡುವ ಕಾರಣವೇನೆಂದರೆ, "ಥಿಯೇಟರ್‌‌ನಲ್ಲಿ 35 ರೂಪಾಯಿ ಕೊಟ್ಟರೆ ಒಂದು ಸಿನೆಮಾ ಮಾತ್ರ ನೋಡುವುದಕ್ಕಾಗುತ್ತದೆ. ಆದರೆ ಅದೇ ದುಡ್ಡಿನಲ್ಲಿ ಒಂದು ಡಿವಿಡಿ ಕೊಂಡರೆ ನಾಲ್ಕೈದು ಸಿನೆಮಾ ನೋಡಬಹುದು. ಜೊತೆಗೆ ಥಿಯೇಟರ್‌‌‌ನಲ್ಲಾದರೆ ಒಮ್ಮೆ ಮಾತ್ರ ಸಿನೆಮಾ ನೋಡಬಹುದು. ಆದರೆ ಒಂದು ಡಿವಿಡಿ ಕೊಂಡರೆ ಎಷ್ಟು ಬಾರಿ ಬೇಕಾದರೂ ಸಿನೆಮಾ ನೋಡಬಹುದು". ಆದರೆ ನಿಜವಾದ ಸಂಗತಿ ಏನೆಂದರೆ, ಈ ಡಿವಿಡಿಗಳನ್ನು ಒಂದೆರಡು ಬಾರಿ ಪ್ಲೇ ಮಾಡಿದರೆ ಮತ್ತೆ ಪ್ಲೇ ಆಗುವುದೇ ಇಲ್ಲ. ಏಕೆಂದರೆ ಅವುಗಳಲ್ಲಿ ಬಳಸುವ ಡಿವಿಡಿಯ ಗುಣಮಟ್ಟ ಅಷ್ಟು ಕಳಪೆಯಾಗಿರುತ್ತದೆ. ನನ್ನ ಸ್ನೇಹಿತನೊಬ್ಬ ಈ ರೀತಿಯ ಡಿವಿಡಿಯೊಂದನ್ನು ಪ್ಲೇ ಮಾಡಲು ಹೋದಾಗ, ಆ ಡಿವಿಡಿಯು ಡ್ರೈವ್‌ನೊಳಗೆ ಸಿಡಿದು ಡ್ರೈವ್ ಹಾಳಾಗಿ ಹೋಗಿತ್ತು. ಮತ್ತೆ ಆ ಡಿವಿಡಿ ಡ್ರೈವ್‌ನ್ನು ಸರಿಪಡಿಸಲು 250 ರೂಪಾಯಿ ಖರ್ಚು ಮಾಡಿದ.

ಈ ರೀತಿಯ ನಕಲಿ ಸಿಡಿ/ಡಿವಿಡಿಗಳನ್ನು ಕೊಳ್ಳುವುದರಿಂದ ಚಲನ ಚಿತ್ರೋದ್ಯಮಕ್ಕೆ ಸಾಕಷ್ಟು ನಷ್ಟ ಉಂಟಾಗುತ್ತದೆ. ಜನರು ಥಿಯೇಟರ್‌ನಲ್ಲಿ ಸಿನೆಮಾ ನೋಡದೆ ನಕಲಿ ಡಿವಿಡಿಗಳನ್ನು ಖರೀದಿಸಿ ಸಿನೆಮಾ ನೋಡಿದರೆ, ಸಿನೆಮಾ ನಿರ್ಮಿಸಿದವರಿಗೆ ಲಾಭವಾಗುವುದಾದರೂ ಹೇಗೆ? ಶುಕ್ರವಾರ ರಿಲೀಸ್ ಆದ ಸಿನೆಮಾದ ಡಿವಿಡಿಗಳು ಶನಿವಾರ ಸಂಜೆ ಅಥವಾ ಭಾನುವಾರದ ಹೊತ್ತಿಗೆಲ್ಲಾ ದೊರೆಯುತ್ತದೆ ಎಂದರೆ ನಕಲಿ ಡಿವಿಡಿಗಳನ್ನು ತಯಾರಿಸುವ ದಂಧೆ ಯಾವ ರೀತಿ ಬೆಳೆದಿರಬಹುದು ನೀವೇ ಊಹಿಸಿ. ಇಂತಹ ಡಿವಿಡಿಗಳನ್ನು ಖರೀದಿಸುವ ಜನರಿಂದಲೇ ನಕಲಿ ಡಿವಿಡಿಗಳ ಹಾವಳಿ ಹೆಚ್ಚಾಗುತ್ತದೆ. ಮುಂಚೆಯೆಲ್ಲಾ ಕ್ಲಾಸ್ ಬಂಕ್ ಮಾಡಿ ಥಿಯೇಟರ್‌‌ಗೆ ಹೋಗುತ್ತಿದ್ದ ಕಾಲೇಜು ಹುಡುಗರು ಈಗ, "ಎರಡು ದಿನ ಬಿಟ್ರೆ ಸಿಡಿ ಸಿಗುತ್ತೆ, ಆಮೇಲೆ ನೋಡಿದ್ರಾಯ್ತು ಬಿಡು" ಅನ್ನೋಕೆ ಶುರು ಮಾಡಿದ್ದಾರೆ! ಎಲ್ಲರೂ ಇದೇ ರೀತಿ ಯೋಚನೆ ಮಾಡೋಕೆ ಪ್ರಾರಂಭಿಸಿದರೆ ಚಿತ್ರೋದ್ಯಮ ನಷ್ಟದ ಹಾದಿ ಹಿಡಿಯುವುದು ಖಚಿತ.

ನಕಲಿ ಸಿಡಿ/ಡಿವಿಡಿ ಹಾವಳಿಯನ್ನು ನಿಯಂತ್ರಿಸುವ ಕೆಲಸ ನಮ್ಮಿಂದಲೇ ಆಗಬೇಕು. ಕಡಿಮೆ ಬೆಲೆಗೆ ಸಿಗುತ್ತದೆ ಎಂದು ಇಂತಹ ಡಿವಿಡಿಗಳನ್ನು ಕೊಳ್ಳಬಾರದು. ಹೊಸ ಚಲನಚಿತ್ರಗಳನ್ನು ಥಿಯೇಟರ್‌ಗಳಲ್ಲಿಯೇ ನೋಡಬೇಕು. ಡಿವಿಡಿಗಳನ್ನು ಕೊಳ್ಳುವುದಿದ್ದರೆ ಅಸಲಿ ಡಿವಿಡಿಗಳನ್ನೇ ಕೊಳ್ಳಬೇಕು. ಪೈರಸಿಯನ್ನು ತಡೆಗಟ್ಟುವ ಉದ್ದೇಶದಿಂದ ಮೋಸರ್‌‌‌ಬೇರ್‍ ಮುಂತಾದ ಕಂಪೆನಿಗಳು ಕಡಿಮೆ ಬೆಲೆಗೆ ಅಸಲಿ ಸಿಡಿ/ಡಿವಿಡಿಗಳನ್ನು ಕೊಡುತ್ತವೆ. ಅಂತಹ ಒರಿಜಿನಲ್ ಸಿಡಿ/ಡಿವಿಡಿಗಳನ್ನು ಖರೀದಿಸಬಹುದು. ನಕಲಿ ಸಿಡಿ/ಡಿವಿಡಿಗಳನ್ನು ತಯಾರಿಸುವವರ ಬಗ್ಗೆ ಮಾಹಿತಿ ಗೊತ್ತಿದ್ದರೆ, ಸಾಧ್ಯವಾದರೆ ಪೊಲೀಸರಿಗೆ ಸುಳಿವು ನೀಡಬಹುದು. ಈ ಕ್ರಮಗಳನ್ನು ಅನುಸರಿಸಿದರೆ ತಾನಾಗಿಯೇ ನಕಲಿ ಡಿವಿಡಿ ಎಂಬ ಪಿಡುಗು ಕಡಿಮೆಯಾಗುತ್ತದೆ, ಹಾಗೆಯೇ ಚಿತ್ರ ನಿರ್ಮಾಪಕರಿಗೂ ನಷ್ಟವಾಗುವುದು ತಪ್ಪುತ್ತದೆ.


Monday, August 2, 2010

ಬ್ಲಾಗ್‌ಗಳನ್ನು ಫಾಲೋ ಮಾಡುವ ವಿಧಾನ

ನಿಮಗೆ ಇಷ್ಟವಾದ ಬ್ಲಾಗ್‌ಗಳನ್ನು ಫಾಲೋ ಮಾಡಬೇಕೆ? ಹಾಗಾದರೆ ಈ ರೀತಿ ಮಾಡಿ. ಮೊದಲು ನಿಮ್ಮ ಬ್ಲಾಗರ್‍ ಅಕೌಂಟಿಗೆ ಲಾಗಿನ್ ಆಗಿ. ಡ್ಯಾಷ್‌‌ಬೋರ್ಡ್‌ನಲ್ಲಿ ಕೆಳಗಡೆ Reading List ಎಂದು ಇರುತ್ತದೆ. ಅಲ್ಲಿ Blogs I'm Following ಎಂಬ ಆಯ್ಕೆಯ ಕೆಳಗೆ ADD ಎಂಬ ಬಟನ್ ಇರುತ್ತದೆ. ಅದನ್ನು ಕ್ಲಿಕ್ಕಿಸಿ.
 


ನಂತರ Add from URL ಎಂಬಲ್ಲಿ ನೀವು ಫಾಲೋ ಮಾಡಬೇಕಾದ ತಾಣದ ವಿಳಾಸ ನೀಡಿ, NEXT ಬಟನ್ ಒತ್ತಿರಿ.
 


ಅಲ್ಲಿ Follow publicly as (ನಿಮ್ಮ ಹೆಸರು) ಅಥವಾ Follow anonymously ಎಂಬ ಎರಡು ಆಯ್ಕೆ ಇರುತ್ತದೆ. ಅನಾಮಿಕರಾಗಿ ಫಾಲೋ ಮಾಡಬೇಕಿದ್ದರೆ Follow anonymously ಎಂಬುದನ್ನು ಆರಿಸಿ. ಇಲ್ಲದಿದ್ದರೆ Follow publicly as ನ್ನು ಆರಿಸಿ Follow ಒತ್ತಿರಿ.
 


ನಂತರ ನಿಮ್ಮ ಡ್ಯಾಷ್‌‌ಬೋರ್ಡ್‌ನಲ್ಲಿ ಆ ಬ್ಲಾಗ್‌ನ ಹೊಸ ಪೋಸ್ಟ್‌ಗಳ ಒಂದೆರಡು ಸಾಲು ಕಂಡುಬರುತ್ತದೆ. ಪೂರ್ತಿ ಲೇಖನ ಓದಬೇಕೆಂದರೆ ಆ ಲೇಖನದ ಶೀರ್ಷಿಕೆಯ ಮೇಲೆ ಕ್ಲಿಕ್ ಮಾಡಿ ಓದಬಹುದು.
 



ಅಥವಾ ಇನ್ನೊಂದು ವಿಧಾನದಲ್ಲಿ ಬ್ಲಾಗ್‌‌ಗಳನ್ನು ಫಾಲೋ ಮಾಡಬಹುದು. ನೀವು ಫಾಲೋ ಮಾಡಬೇಕಾದ ಬ್ಲಾಗ್‌ಗೆ ಭೇಟಿ ಕೊಡಿ. ಅಲ್ಲಿ ಕಂಡುಬರುವ Follow ಬಟನ್ ಒತ್ತಿರಿ.




ನಂತರ ಅಲ್ಲಿ ಗೂಗಲ್ ಅಥವಾ ನಿಮ್ಮ ಇತರ ಅಕೌಂಟ್ ಇರುವ ಚಿತ್ರದ ಮೇಲೆ ಕ್ಲಿಕ್ ಮಾಡಿ. 
 


ನಿಮ್ಮ ಯೂಸರ್‍ ನೇಮ್ ಹಾಗೂ ಪಾಸ್‌‌ವರ್ಡ್ ನೀಡಿ ಲಾಗಿನ್ ಆಗಿ.
 



ನಂತರ Follow publicly as (ನಿಮ್ಮ ಹೆಸರು) ಅಥವಾ Follow anonymously ಎಂಬ ಆಯ್ಕೆಯಲ್ಲಿ ಒಂದನ್ನು ಆರಿಸಿ Follow ಬಟನ್ ಕ್ಲಿಕ್ ಮಾಡಿ.







-ಪ್ರಸನ್ನ.ಎಸ್.ಪಿ

ನೋಕಿಯ ಮೊಬೈಲ್‌ನಲ್ಲೊಂದು ತಮಾಷೆ

ನಿಮ್ಮ ಬಳಿ ನೋಕಿಯ ಕಲರ್‍ ಬೇಸಿಕ್ ಮೊಬೈಲ್ (ಉದಾ: nokia1600, nokia1208) ಇದ್ದರೆ ಇಲ್ಲೊಂದು ತಮಾಷೆ ಇದೆ ನೋಡಿ. ಕೀ ಪ್ಯಾಡ್‌‌ನಲ್ಲಿ *#5513# ಒತ್ತಿರಿ, ತಕ್ಷಣ ಸ್ಕ್ರೀನ್ ಉಲ್ಟಾ ಆಗುತ್ತದೆ! ಅಂದರೆ ಮೊಬೈಲನ್ನು ತಲೆಕಳಗೆ ಹಿಡಿದು ನೋಡಿದರೆ ಸ್ಕ್ರೀನ್ ಸರಿಯಾಗಿ ಕಾಣುತ್ತದೆ! *#5512# ಒತ್ತಿದರೆ ಸ್ಕ್ರೀನ್ ಎಡಕ್ಕೆ ತಿರುಗುತ್ತದೆ. *#5514# ಒತ್ತಿದರೆ ಸ್ಕ್ರೀನ್ ಬಲಕ್ಕೆ ತಿರುಗುತ್ತದೆ. ಮತ್ತೆ ಸ್ಕ್ರೀನ್ ಸರಿಹೋಗಬೇಕಾದರೆ *#5511# ಒತ್ತಬೇಕು. ಹೈ ಎಂಡ್ ಮಾಡೆಲ್‌ಗಳಲ್ಲಿ ಈ ರೀತಿ ಮಾಡಲು ಸಾಧ್ಯವಿಲ್ಲ. ಬೇಸಿಕ್ ಮಾಡೆಲ್‌ಗಳಲ್ಲಿ ಮಾತ್ರ ಇದು ಸಾಧ್ಯ. ಇದರ ಉಪಯೋಗ ಏನೆಂದು ಕೇಳಬೇಡಿ, ಏಕೆಂದರೆ ನನಗೂ ಇದರ ಉಪಯೋಗ ಗೊತ್ತಿಲ್ಲ! :) ಸುಮ್ಮನೇ ತಮಾಷೆಗೆ ಸ್ಕ್ರೀನ್ ಉಲ್ಟಾ ಮಾಡಿ ಆನಂದಿಸಬಹುದು.




-ಪ್ರಸನ್ನ.ಎಸ್.ಪಿ