Friday, October 15, 2010

ಈ ಸಮೀಕರಣವನ್ನು ಬಿಡಿಸಿ

ಈ ಕೆಳಗಿನ ಸಮೀಕರಣವನ್ನು ಬಿಡಿಸಿ ಉತ್ಪನ್ನ ತಿಳಿಸಿದವರಿಗೆ ಅದನ್ನೇ ಉಡುಗೊರೆಯಾಗಿ ನೀಡಲಾಗುವುದು. ತಡ ಮಾಡಬೇಡಿ, ಈಗಲೇ ಬಿಡಿಸಿ. :-)


C12H22O11 + NaCl + H2O + C6H8O7 -----} ?

Wednesday, October 13, 2010

ಮೈಕ್ರೋಸಾಫ್ಟ್ ವರ್ಡ್‌‌‌ನಲ್ಲಿ ಪ್ರತ್ಯೇಕ ಪೇಜ್ ಸೆಟ್ಟಿಂಗ್

ಮೈಕ್ರೋಸಾಫ್ಟ್ ವರ್ಡ್‌ನಲ್ಲಿ ಬೇರೆ ಬೇರೆ ಪುಟಕ್ಕೆ ಪ್ರತ್ಯೇಕ ಪೇಜ್ ಸೆಟ್ಟಿಂಗ್ ಮಾಡಬಹುದು. ಉದಾಹರಣೆಗೆ ಮೊದಲನೆ ಪುಟ A4, ಎರಡನೆ ಪುಟ Legal ಹಾಗೂ ಮೂರನೆ ಪುಟ 4X6 ಅಳತೆ ಹೊಂದಿರುವಂತೆ ಸೆಟ್ ಮಾಡಬಹುದು. ಅದು ಹೇಗೆಂದು ನೋಡೋಣ,

ಮೊದಲು ನೀವು ಯಾವ ಪುಟದ ವಿನ್ಯಾಸ ಬದಲಿಸಬೇಕೋ ಆ ಪುಟದ ಪ್ರಾರಂಭದಲ್ಲಿ ಕರ್ಸರ್‍ ಕ್ಲಿಕ್ ಮಾಡಿ. ನಂತರ Page Setup ಒತ್ತಿ.(File--> Page Setup.) ಪೇಜ್ ಸೆಟಪ್‌ನಲ್ಲಿ Margins, Paper ಮತ್ತು Layoutಗಳನ್ನು ಬೇಕಾದ ಅಳತೆಗೆ ಬದಲಿಸಿಕೊಂಡ ನಂತರ Paper ಟ್ಯಾಬ್ ಮೇಲೆ ಕ್ಲಿಕ್ ಮಾಡಿ, ಕೆಳಭಾಗದಲ್ಲಿ Previewನಲ್ಲಿ Apply to: ಎಂದಿರುತ್ತದೆ, ಅಲ್ಲಿ This point forward ಆರಿಸಿ OK ಒತ್ತಿ


 
(ಚಿತ್ರವನ್ನು ಹಿರಿದಾಗಿಸಲು ಅದರ ಮೇಲೆ ಕ್ಲಿಕ್ಕಿಸಿ)


ಈಗ ನೋಡಿ ನೀವು ಸೆಟ್ ಮಾಡಿರುವ ಪುಟದ ಅಳತೆ ಹಿಂದಿನ ಪುಟಕ್ಕಿಂತ ಭಿನ್ನವಾಗಿರುತ್ತದೆ.


ಇದೇ ರೀತಿ ವರ್ಡ್ ತಂತ್ರಾಂಶದಲ್ಲಿ ವಿವಿಧ ಪುಟಗಳು ಬೇರೆ ಬೇರೆ ಅಳತೆ ಹೊಂದಿರುವಂತೆ ಮಾಡಬಹುದು.

© ಪ್ರಸನ್ನ ಶಂಕರಪುರ

Wednesday, October 6, 2010

ಫೀಡ್ ಬರ್ನರ್‍ ಮತ್ತು ಟ್ವಿಟರ್‍

ಫೀಡ್ ಬರ್ನರ್‌ನ ಹಿಂದಿನ ಸಂಚಿಕೆಯಲ್ಲಿ ಬ್ಲಾಗ್ ಓದುಗರಿಗೆ ನಿಮ್ಮ ಲೇಖನಗಳನ್ನು ಇ-ಮೇಲ್ ಮೂಲಕ ತಲುಪಿಸುವುದು ಹೇಗೆಂದು ತಿಳಿಸಿದ್ದೆ. ಈ ಸಲ, ನೀವು ಬ್ಲಾಗಿನಲ್ಲಿ ಹೊಸ ಬರಹ ಸೇರಿಸಿದಾಗ ಅದರ ಶೀರ್ಷಿಕೆ ತಾನಾಗಿಯೇ ಟ್ವಿಟರ್‌ನಲ್ಲಿ ಬರುವಂತೆ ಮಾಡುವುದು ಹೇಗೆ ಎಂದು ನೋಡೋಣ.(ಇದಕ್ಕೆ ನಿಮ್ಮಲ್ಲಿ ಒಂದು ಟ್ವಿಟರ್‍ ಅಕೌಂಟ್ ಇರಬೇಕು. ಇದರ ಉಪಯೋಗವೆಂದರೆ ನೀವು ನಿಮ್ಮ ಬ್ಲಾಗಿನಲ್ಲಿ ಹೊಸ ಲೇಖನ ಬರೆದಾಗ ಅದರ ಶೀರ್ಷಿಕೆ ಹಾಗೂ ಲೇಖನದ ಒಂದೆರಡು ಸಾಲು ಜೊತೆಗೆ ಆ ಲೇಖನಕ್ಕೆ ಲಿಂಕ್ ಟ್ವಿಟರ್‌ನಲ್ಲಿ ಪ್ರಕಟವಾಗುತ್ತದೆ. ಅದನ್ನು ನೋಡುವ ನಿಮ್ಮ ಟ್ವಿಟರ್‍ ಹಿಂಬಾಲಕರು{Followers} ನಿಮ್ಮ ಬ್ಲಾಗಿಗೆ ಭೇಟಿ ನೀಡಬಹುದು.)

ಈಗ ಅದನ್ನು ಪ್ರಾರಂಭಿಸುವುದು ಹೇಗೆ ನೋಡೋಣ. ಮೊದಲು ಫೀಡ್ ಬರ್ನರ್‍ ತಾಣಕ್ಕೆ ಹೋಗಿ(http://feedburner.com). ಅಲ್ಲಿ ನಿಮ್ಮ ಗೂಗಲ್ ಯೂಸರ್‌ನೇಮ್ ಮತ್ತು ಪಾಸ್‌ವರ್ಡ್ ಕೊಟ್ಟು ಲಾಗಿನ್ ಆಗಿ.


(ಚಿತ್ರಗಳನ್ನು ಹಿರಿದಾಗಿಸಲು ಅದರ ಮೇಲೆ ಕ್ಲಿಕ್ಕಿಸಿ)

ನಂತರ ನಿಮ್ಮ ಫೀಡ್ ಟೈಟಲ್ (FEED TITLE) ಮೇಲೆ ಕ್ಲಿಕ್ ಮಾಡಿ.




 ನಂತರ ಬರುವ ವಿಂಡೋನಲ್ಲಿ ಮೇಲ್ಗಡೆ Publicize ಎಂಬ ಟ್ಯಾಬ್ ಇರುತ್ತದೆ. ಅದರ ಮೇಲೆ ಕ್ಲಿಕ್ಕಿಸಿ.



ಈಗ ಎಡಬದಿಯಲ್ಲಿರುವ Socialize ಒತ್ತಿ. Select account ಕೆಳಗೆ ಇರುವ Add a Twitter account ಮೇಲೆ ಕ್ಲಿಕ್ ಮಾಡಿ.




ಈಗ ಒಂದು ಹೊಸ ಟ್ವಿಟರ್‍ ವಿಂಡೋ ತೆರೆಯುತ್ತದೆ. ಅಲ್ಲಿ ನಿಮ್ಮ ಟ್ವಿಟರ್‍ ಯೂಸರ್‍ ನೇಮ್ ಮತ್ತು ಪಾಸ್‌ವರ್ಡ್ ಟೈಪಿಸಿ, Allow ಬಟನ್ ಒತ್ತಿ.




ಇಷ್ಟು ಮಾಡಿದರೆ ಅರ್ಧ ಕೆಲಸ ಮುಗಿದಂತೆ ಆಯಿತು. ಈಗ ಇನ್ನೊಂದು ವಿಂಡೋನಲ್ಲಿರುವ ಫೀಡ್ ಬರ್ನರ್‌ನ Socialize ಆಯ್ಕೆಗೆ ಬನ್ನಿ. Post content: ಇಲ್ಲಿ ಲೇಖನದ ಶೀರ್ಷಿಕೆ ಮಾತ್ರ ಟ್ವೀಟ್ ಆಗಬೇಕೇ ಅಥವಾ ಶೀರ್ಷಿಕೆಯ ಜೊತೆ ಲೇಖನದ ಒಂದೆರಡು ಸಾಲುಗಳೂ ಸೇರಬೇಕೆ ಎಂದು ಆರಿಸಿ. Include link ಮತ್ತು Leave room for retweets ಸೆಲೆಕ್ಟ್ ಮಾಡಿ. ಉಳಿದ ಆಯ್ಕೆಗಳು ಅಷ್ಟೇನೂ ಮುಖ್ಯವಲ್ಲ, ಬೇಕಿದ್ದರೆ ಅವುಗಳನ್ನು ತುಂಬಿಸಿ.



ನಂತರ ಕೆಳಗೆ Sample Item Preview ನೋಡಿಕೊಳ್ಳಿ. ಎಲ್ಲಾ ಸರಿಯಿದೆ ಎನಿಸಿದರೆ ಕೊನೆಯಲ್ಲಿ Activate ಬಟನ್ ಇರುತ್ತದೆ, ಅದನ್ನು ಒತ್ತಿ.


ಅಲ್ಲಿಗೆ ಎಲ್ಲಾ ಕೆಲಸಗಳು ಮುಗಿದಂತೆ. ಮುಂದಿನ ಸಲ ನೀವು ನಿಮ್ಮ ಬ್ಲಾಗ್‌ನಲ್ಲಿ ಹೊಸ ಬರಹ ಸೇರಿಸಿದಾಗ ಅದರ ಶೀರ್ಷಿಕೆ ಮತ್ತು ಆ ಬರಹಕ್ಕೆ ಲಿಂಕ್ ಟ್ವೀಟಾಗುತ್ತದೆ. ಇದರ ಜೊತೆಗೆ ನೀವು ಫೇಸ್‌‌ಬುಕ್‌ನಲ್ಲಿ ಟ್ವಿಟರ್‍ ಅಪ್ಲಿಕೇಷನ್ ಸೇರಿಸಿದ್ದರೆ ಅಲ್ಲಿಯೂ ಆ ಟ್ವೀಟ್ ನಿಮ್ಮ ಸ್ನೇಹಿತರಿಗೆ ಕಾಣಿಸುತ್ತದೆ. ಆಗ ಅವರು ನಿಮ್ಮ ಬ್ಲಾಗಿಗೆ ಭೇಟಿ ನೀಡಬಹುದು.(ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವುದು ಜಾಣತನ ಅಲ್ಲವೇ?) ನಿಮ್ಮಲ್ಲಿ ಟ್ವಿಟರ್‍ ಅಕೌಂಟ್ ಇಲ್ಲದಿದ್ದರೆ ಇನ್ನೂ ಏಕೆ ಕಾಯುತ್ತಿದ್ದೀರ? ಈಗಲೇ ಒಂದು ಅಕೌಂಟ್ ಹೊಂದಿ ಮತ್ತು ನಿಮ್ಮ ಬ್ಲಾಗಿಗೆ ಓದುಗರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಿ.

ಈ ವಿಧಾನ ಬೇಡ ಎನ್ನುವುದಾದರೆ ನಿಮ್ಮ ಬ್ಲಾಗ್ ಪೋಸ್ಟ್‌‌ನ ಕೆಳಗೆ ಟ್ವೀಟ್ ಬಟನ್ ಇರುತ್ತದೆ. ಅದನ್ನು ಒತ್ತಿ ಟ್ವೀಟಿಸಬಹುದು.

ಹ್ಞಾಂ... ಸಂಪದದಲ್ಲೂ ಟ್ವೀಟ್ ಬಟನ್ ಇದೆ ಗಮನಿಸಿದ್ದೀರಾ? 


© ಪ್ರಸನ್ನ ಶಂಕರಪುರ

Friday, October 1, 2010

ಅಯೋಧ್ಯೆ ತೀರ್ಪು ಪ್ರಕಟ ಹಿನ್ನೆಲೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ!

ಟಿವಿ9ನಲ್ಲಿ ಬ್ರೇಕಿಂಗ್ ನ್ಯೂಸ್ ಎಂದು ಮೇಲೆ ಕೆಳಗೆ ಸುದ್ಧಿಗಳನ್ನು ಪ್ರಕಟಿಸುತ್ತಿರುತ್ತಾರೆ. ಆದರೆ ಆ ಎರಡು ಸುದ್ಧಿಗಳು ಬೇರೆ ಬೇರೆ ವಿಷಯಕ್ಕೆ ಸಂಬಂಧಿಸಿದ್ದರೆ, ಎರಡನ್ನೂ ಒಟ್ಟಿಗೆ ಕೂಡಿಸಿಕೊಂಡು ಓದಿ, ಎಷ್ಟು ಮಜವಾಗಿರುತ್ತದೆ ಎಂದು ಗೊತ್ತಾಗುತ್ತದೆ. ನಿನ್ನೆ ಅಯೋಧ್ಯೆ ಪ್ರಕರಣಕ್ಕೆ ತೀರ್ಪು ಬಂದ ಬೆನ್ನಲ್ಲೇ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ಪುತ್ರನೂ ಲಂಚ ಹಗರಣದಲ್ಲಿ ಸಿಕ್ಕಿಬಿದ್ದಿದ್ದು ಟಿವಿ9ನಲ್ಲಿ ಪ್ರಸಾರವಾಗುತ್ತಿತ್ತು. ಮೇಲೆ ಅಯೋಧ್ಯೆಯ ಬಗ್ಗೆ ಹಾಗೂ ಕೆಳಗೆ ಜಗದೀಶ್ ನಾಯ್ಡು ಬಗ್ಗೆ ಸಾಲುಗಳು, ಅದನ್ನು ಕೂಡಿಸಿ ಓದಿದಾಗ ನನಗೆ ಕಾಣಿಸಿದ ತಮಾಷೆ ಇಲ್ಲಿದೆ.

ಅಯೋಧ್ಯೆ ತೀರ್ಪು ಪ್ರಕಟ ಹಿನ್ನೆಲೆ
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ

ಸುಪ್ರಿಂ ಕೋರ್ಟ್‌ಗೆ ಹೋಗಲು ತೀರ್ಮಾನ
ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹೇಳಿಕೆ

ನಿಜವಾದ ಸುದ್ಧಿಗಳನ್ನು ತಿಳಿಯಲು ಒಂದು, ಮೂರು ಹಾಗೂ ಎರಡು ನಾಲ್ಕನೆಯ ಸಾಲುಗಳನ್ನು ಓದಿ.

ಈ ರೀತಿ ಇನ್ನಷ್ಟು ಸುದ್ಧಿಗಳನ್ನು ಗಮನಿಸಿದಿರೆ ನಿಮ್ಮೊಂದಿಗೆ ಹಂಚಿಕೊಳ್ಳುವೆ, ನೀವೂ ಇಂತವುಗಳನ್ನು ನೋಡಿದರೆ ನಮ್ಮೊಂದಿಗೆ ಹಂಚಿಕೊಳ್ಳಿ.

-ಪ್ರಸನ್ನ ಶಂಕರಪುರ


ರಾಮ ಜನ್ಮಭೂಮಿ - ಬಾಬರಿ ಮಸೀದಿ ವಿವಾದ ನನ್ನ ದೃಷ್ಟಿಯಲ್ಲಿ.

ರಾಮಜನ್ಮ ಭೂಮಿ - ಬಾಬ್ರಿ ಮಸೀದಿ ಜಾಗದ ಬಗ್ಗೆ ತೀರ್ಪು ಬರಲಿದೆ ಎಂದು ಮಾಧ್ಯಮಗಳಲ್ಲಿ ಪ್ರಸಾರವಾಗುವ ತನಕ ಹೀಗೊಂದು ವಿವಾದವಿದೆ ಎಂದೇ ನನಗೆ ಗೊತ್ತಿರಲಿಲ್ಲ. ಗೊತ್ತಾದ ಮೇಲೂ ಇದರ ಬಗ್ಗೆ ನನಗೆ ಯಾವ ಆಸಕ್ತಿಯೂ ಇರಲಿಲ್ಲ. ನಾನು ಹುಟ್ಟುವ ವೇಳೆಗೆ ಗಲಾಟೆ, ಹತ್ಯಾಕಾಂಡಗಳೆಲ್ಲಾ ಮುಗಿದೇ ಹೋಗಿತ್ತು. ಬುದ್ಧಿ  ಬೆಳೆಯುವ ವೇಳೆಗಾಗಲೇ ತೀರ್ಪು ಬರುವ ಸಮಯವಾಗಿತ್ತು. ನಾನು ಈ ವಿಷಯದಲ್ಲಿ ಧಾರ್ಮಿಕವಾಗಿಯಾಗಲೀ ಅಥವಾ ಭಾವನಾತ್ಮಕವಾಗಿಯಾಗಲೀ ತೊಡಗಿಸಿಕೊಳ್ಳಲೇ ಇಲ್ಲ. ಹೀಗಾಗಿ ಈ ತೀರ್ಪಿನಿಂದ ನನಗೆ ಸಂತೋಷವೂ ಆಗಿಲ್ಲ, ಬೇಸರವೂ ಆಗಿಲ್ಲ.

ತೀರ್ಪು ಬಂದ ಮೇಲೂ ಈ ವಿಷಯದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಉಂಟಾಗಲಿಲ್ಲ. ಜನರಿಗೂ ಇದರ ಬಗ್ಗೆ ಕುತೂಹಲ ಇದ್ದ ಬಗ್ಗೆ ನಾಕಾಣೆ. ಯಾವುದೋ ಒಂದು ಪಂಗಡದ ಜನರನ್ನು ಒಲಿಸಿಕೊಳ್ಳಲು ರಾಜಕೀಯ ಪಕ್ಷಗಳು ಸುಮ್ಮನೇ ಈ ವಿಷಯವನ್ನು ದಾಳವಾಗಿಸಿಕೊಂಡಿವೆ ಅನಿಸುತ್ತದೆ. ತೀರ್ಪು ಬರುವ ಮೊದಲು ಹಾಗೂ ತೀರ್ಪು ಬಂದ ನಂತರ ಸುತ್ತ ಮುತ್ತಲ ಜನರಲ್ಲಿ ಯಾವುದೇ ರೀತಿಯ ಬದಲಾವಣೆಯನ್ನೂ ನಾನು ಗಮನಿಸಿಲ್ಲ.

ಅಲ್ಲಿರುವ ತುಂಡು ಭೂಮಿ ಯಾರಿಗೆ ಸೇರಿದರೇನು? ಆ ಜಾಗ ಭಾರತಕ್ಕೇ ಸೇರಿದ್ದಲ್ಲವೇ? ನಾವೆಲ್ಲರೂ ಭಾರತೀಯರಲ್ಲವೇ?

-ಪ್ರಸನ್ನ ಶಂಕರಪುರ